ನಿಶ್ಶಬ್ಧತೆಯನ್ನು ಕೆಣಕುವ ಶರಧಿಯ ಭೋರ್ಗರೆತ; ಸುಂದರ ಕ್ಷಿತಿಜದಾಚೆಗಿನ ವಿಸ್ಮಯವನ್ನು ಕಾಣುವ ಉತ್ಸುಕತೆ; ಆಗಸವೂ, ಸಾಗರವೂ ಸೇರಿದಂತೆನಿಸುವ ಮನದಲ್ಲಿ ಒಂದು ರೀತಿಯ ಕುತೂಹಲವನ್ನು ಕೆರಳಿಸುವ ದಿಗಂತದ ದೃಶ್ಯ; ಮೋಡದ ಮರೆಯಲ್ಲಿ ಬೆಳಕಿನಾಟವಾಡುತ್ತ, ಕೊನೆಗೆ ಕಾರ್ಮೋಡದಲ್ಲಿ ಕಾಣೆಯಾಗುವ ಭಾಸ್ಕರನ ನೋಟ; ಕಣ್ಣಿಗೆ ದೃಶ್ಯಕಾಣಿಕೆಯನ್ನಿತ್ತಂತಿತ್ತು
ಕೃಷ್ಣಮೇಘಗಳ ಮಧ್ಯೆ ಮರೆಯಾಗಿದ್ದ ದಿನಕರನ್ನು ಕಾಣಲಾರದೆ, ಕಣ್ಣದುರಿಗಿದ್ದ ಸಾಗರನತ್ತ ಕಣ್ಣುಹಾಯಿಸಿದಾಗ ಸುಂದರ ನಿಸರ್ಗದ ಸೌಂದರ್ಯತೆಗೆ ಸಾಟಿಯೇ ಇಲ್ಲದ ಸೌಂದರ್ಯವನ್ನು ಕಂಡು ಮನವು ಮನಃಪೂರ್ತಿಯಾಗಿ ಮನಸೋತಿತು. "ರವಿ ಕಾಣದ್ದನ್ನು ಕವಿ ಕಂಡ" ಎಂದು ಹೇಳಿರುವುದು ಇದಕ್ಕೇ ಇರಬೇಕೆನಿಸಿತು. ಏಕೆಂದರೆ ಮೋಡದಲ್ಲಿ ಮರೆಯಾಗಿದ್ದ ರವಿ ಕಾಣಲಾರದ ದೃಶ್ಯವನ್ನು ನಾನು ಕಾಣುತ್ತಲಿದ್ದೆ!
ಕಣ್ಣೋಟಕ್ಕೆ ನಿಲುಕದ ಶರಧಿಯ ಬೃಹದ್ಗಾತ್ರ! ಅದರೆದುರು ಯಕ್ಕಶ್ಚಿತ್ ಮಾನವನ ಯಕ್ಕಶ್ಚಿತ್ ಗಾತ್ರವನ್ನು ಹೋಲಿಸುವುದಂತೂ ಮೌಢ್ಯತೆಯೇ ಸರಿ!
ಸಮುದ್ರದ ದಡದಲ್ಲಿ ಮರಳಿನ ಮೇಲೆ ನಿಂತಿದ್ದ ನನ್ನೆದುರಿಗೆ ಸಾವಿರಾರು ಅಲೆಗಳು ಬಂದು ಹೋಗಿದ್ದವು.... ಇನ್ನೂ ಹಲವಾರು ಬರುತ್ತಲಿದ್ದವು. ಪೃಕ್ರತಿಯ ಈ ಆಟಕ್ಕೆ ಕೊನೆಯೂ ಇಲ್ಲ ಬಿಡಿ! ಆದರೆ ಆ ಅಲೆಗಳು ಬಂದು ಸುಮ್ಮನೆ ಹೋಗುತ್ತಿರಲಿಲ್ಲ........... ಕಾಲ್ಕೆಳಗಿನ ಮರಳನ್ನು ಒಯ್ಯುತ್ತಾ, ಮತ್ತೆ ಕಾಲ ಮೇಲೆ ಎರಚುತ್ತಾ, ಕಾಲನ್ನು ಮರಳಿನಲ್ಲಿ ಹುಗಿಸುತ್ತಾ, ಸಾಗರದೆದುರು ತನ್ನ ಗಾತ್ರ ಹೋಲಿಸ ಹೊರಟವನನ್ನು ಇನ್ನೂ ಕುಬ್ಜನಾಗಿ ತೋರ್ಪಡುವಂತೆ ಮಾಡಿ ಅಣಕಿಸುತ್ತಿದ್ದವು!
ಒಮ್ಮೆ ಕಣ್ಣುಹಾಯಿಸಿ ಮುಗಿಯುವಂಥ ದೃಶ್ಯವಲ್ಲ ಅದು; ಮತ್ತೊಮ್ಮೆ, ಮಗದೊಮ್ಮೆ ನೋಡಬೇಕೆನಿಸುವ ದೃಶ್ಯ. ಜೇವಮಾನವಿಡೀ ನೋಡಿದರೂ ಮುಗಿಯದಂತಹ ಜಲರಾಶಿ.
ಅದೇ ಹೊತ್ತಿಗೆ ಮೋಡಗಳನ್ನು ಸರಿಸುತ್ತಲೂ, ಸಾವಕಾಶವಾಗಿ ಕೆಳಗಿಳಿಯುತ್ತ, ಶೇಖರನಿಗೆ ದಾರಿಯನ್ನು ಬಿಟ್ಟು ಕಾಣೆಯಾಗುವ ಕೃತ್ಯದಲ್ಲಿ ಯಶಸ್ವಿಯಾಗಲು ಪಶ್ಚಮದತ್ತ ಹೊರಟಿದ್ದ; ತನ್ನ ಪ್ರಖರ ಕಿರಣಗಳನ್ನು ತಿಳಿಗೊಳಿಸಿ, ಕೇಸರಿ ಬಣ್ಣಕ್ಕೆ ತಿರುಗುತ್ತಿದ್ದ ತಿಗ್ಮಕರನ ಅತಿಸುಂದರ ದೃಶ್ಯಕಾವ್ಯ ಮನದಲ್ಲಿ ಸುಮಧುರ ಭಾವರಾಗಗಳನ್ನು ಹುಟ್ಟಿಹಾಕುತ್ತಲಿತ್ತು.
"ಸೌಂದರ್ಯವೇ ನಿಸರ್ಗ, ನಿಸರ್ಗವೇ ಸೌಂದರ್ಯ,
ಹಾಗಾಗಿ,
ಸೌಂದರ್ಯದ ಸೌಂದರ್ಯಕ್ಕೆ ಸೌಂದರ್ಯವೇ ಸಾಟಿ"
- ಪ್ರಣವ